ಹಾಸ್ಯ ಮತ್ತು ಔಚಿತ್ಯ : ಅತಿನಿಯಮ ಬೇಡ
ಲೇಖಕರು : ಡಾ. ಎಂ. ಪ್ರಭಾಕರ ಜೋಶಿ
ಭಾನುವಾರ, ಜೂನ್ 29 , 2014
|
"ದಕ್ಷಯಜ್ಞ' ಯಕ್ಷಗಾನ ಆಟದ ಹಾಸ್ಯ ಸನ್ನಿವೇಶವೊಂದರ ಬಗೆಗೆ ನಡೆದಿರುವ ಚರ್ಚೆಯಲ್ಲಿ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಬರಹ ಬಹಳ ಚೊಕ್ಕ, ಸುಟ ಮತ್ತು ಸಮತೋಲ ವಿಮರ್ಶೆಯ ಮಾದರಿಯಾಗಿದೆ. ಅಭಿನಂದನೆಗಳು.
ಹಾಸ್ಯಕ್ಕೆ ಔಚಿತ್ಯದ ಸೀಮೆ ಇದೆ, ನಿಜ. ಆದರೆ ಅದು ಬೇರೆ ರೀತಿ. ಔಚಿತ್ಯಪೂರ್ಣವಾದ ಅನೌಚಿತ್ಯವೇ ಹಾಸ್ಯ. ವಿಚಿತ್ರ ವೇಷ, ಮಾತು, ವಕ್ರ ವಿಕಾರಗಳೇ ಹಾಸ್ಯಕ್ಕೆ ದ್ರವ್ಯವೆಂದು ನಾಟ್ಯ ಶಾಸ್ತ್ರವೂ ಹೇಳಿದೆ. ಭಾರತೀಯ ರಂಗ ಕಲೆಗಳ ಲ್ಲೆಲ್ಲ ಸುಮಾರಾಗಿ ಹಾಸ್ಯದ ಸ್ಥೂಲವಾದ ರೂಪವು ಒಂದೇ ಆಗಿದೆ. ಕಟ್ಟುಹಾಸ್ಯಗಳೂ ಒಂದೇ ತೆರನಾಗಿವೆ.
|
ಯಕ್ಷಗಾನದಲ್ಲಿ ರಾಕ್ಷಸ ದೂತನ ಒ೦ದು ವೇಷ ( ಸಾ೦ಧರ್ಭಿಕ ಚಿತ್ರ )
|
"ದಕ್ಷಯಜ್ಞ' ಆಟದ ಆ ಒಂದು ಪ್ರದರ್ಶನ ಎಲ್ಲೆ ಮೀರಿರಲೂಬಹುದು. ಅದು ಪರಿಶೀಲ ನಾರ್ಹ. ಹಾಸ್ಯದ ಸಿದ್ಧಿ ಕತ್ತಿಯ ಅಲಗಿನ ನಡಿಗೆ. ಸುಲಭ ಅಲ್ಲ. ಹಾಸ್ಯದ ಚೌಕಟ್ಟು ಸಡಿಲ ಹೌದಾ ದರೂ ಅದಕ್ಕೂ ಕೆಲವು ಕಲಾನ್ಯಾಯಗಳು ಬೇಕು.
ಆದರೆ, ಮುಖ್ಯವಾಗಿ ಜಾತಿಯನ್ನು ಆಧರಿಸಿ -ಇದು ಆ ಜಾತಿಗೆ ಅವಮಾನ, ಇದು ಇನ್ನೊಬ್ಬ ರಿಗೆ ಅವಮಾನ ಎಂಬ ನೆಲೆಯಲ್ಲಿ ಆಕ್ಷೇಪಿಸು ವುದು ತುಂಬ ಅಪಾಯಕಾರಿ. ರಸಿಕತೆಗೆ, ತಿಳಿಹಾಸ್ಯಕ್ಕೆ ಇಂತಹ ಅತಿನಿಯಮನ ಸಲ್ಲದು.
ಹಿಂದೊಮ್ಮೆ ಒಂದು ವರ್ಗದ ಸಂಬಂಧವುಳ್ಳ ಹಾಸ್ಯದ ಬಗೆಗೆ, ಈ ಬರೆಹದ ಲೇಖಕನು ಒಂದು ಟಿಪ್ಪಣಿಯಲ್ಲಿ, ""ಅದೊಂದು ಹಾಸ್ಯ. ಅನುಭವಿಸಿ ಸಂತೋಷಪಡಿ' ಎಂದು ಬರೆದಿದ್ದ. ಅದನ್ನು ದೊಡ್ಡ ವಿಚಾರವಾಗಿ ಮಾಡುವ ಯತ್ನ ನಡೆದಾಗ ಹಿರಿಯ ಕಲಾಭಿಮಾನಿಗಳೊಬ್ಬರು ಆ ಕುರಿತು - ""ಇದರಲ್ಲಿ ಜಾತಿ ತಂದು ಗೊಂದಲ ಮಾಡಬೇಡಿ' ಎಂದು ಹೇಳಿದ್ದರು. ಅದು ಆರೋಗ್ಯಕರ ನಿಲುಮೆ.
ಆಟದ ಹಾಸ್ಯದಲ್ಲಿ ವರ ಕೊಟ್ಟ ಬ್ರಹ್ಮನನ್ನೇ "ಏಳು, ಕೂರು' ಎನ್ನುವ ರಾಕ್ಷಸ ಪಾತ್ರದ ದೃಶ್ಯವಿದೆ. "ಶಿವ, ಪಾರ್ವತಿ, ಇಂದ್ರ, ರಾವಣ, ಹಿರಣ್ಯಕಶಿಪು, ಅಗ್ನಿ, ಕಿರಾತ, ಬ್ರಾಹ್ಮಣ, ವ್ಯಾಪಾರಿ - ಎಲ್ಲರನ್ನು ಪ್ರಭೇದವಿಲ್ಲದೆ ಹಾಸ್ಯ ಮಾಡುತ್ತಾರೆ. ಸಿನೆಮಾದಲ್ಲಿ, ನಿದ್ರೆ ಮಾಡುವ ವಾಚ್ಮನ್, ಕಳ್ಳನನ್ನು ಸೂಕ್ಷ್ಮವಾಗಿ ಗಮನಿಸಿ ಹಿಡಿಯುವ ವಾಚ್ಮನ್ ಇಬ್ಬರೂ ಇದ್ದಾರೆ. ರಾಜಕಾರಣಿಗಳ ಲೇವಡಿ ಇದೆ. ಇವುಗಳಿಗೆ ತುಂಬ ಆಯಾಮಗಳಿವೆ. ಇದನ್ನೆಲ್ಲ "ಅವಮಾನ'ದ ದೃಷ್ಟಿಯಲ್ಲಿ ತೂಗಿ ನೋಡಬಾರದು. ಅದು ರಿಲೀಸ್ - ಬಿಡುಗಡೆಯ ಪರಿಕಲ್ಪನೆ. ಭಾವಮೋಕ್ಷ ಎನ್ನೋಣ.
ಸರ್ವಜನ ರಂಜಕವಾದ ಆಶುವಿನೋದಗಳನ್ನೆಲ್ಲ ತುಂಬ ಮೂಗೆತ್ತರಿಸಿ ಒರೆದು ನೋಡಬೇಕಿಲ್ಲ. ಸುಭದ್ರಾ ಕಲ್ಯಾಣದ ವನಪಾಲಕನು, ರಾಜ ಬಲರಾಮನಲ್ಲಿ ಹಾಗೆ ಮಾತಾಡಿಯಾನೆ ಎಂದು ಕೇಳಬಾರದು.
ಕಟ್ಟುನಿಟ್ಟು, ಗಾಂಭೀರ್ಯದ ಹೆಸರಿನಲ್ಲಿ ಹಾಸ್ಯಗಳನ್ನು "ನಿಷೇಧಿಸುವ' ದಾರಿ, ಕಲೆಯ ಅರಳುವಿಕೆಗೆ ಬಾಧಕ. ಈ ಮಾತು, ಔಚಿತ್ಯ ಭಂಗಕ್ಕೆ, ಕೀಳು ಅಭಿರುಚಿಗೆ ಒಪ್ಪಿಗೆ ಖಂಡಿತ ಅಲ್ಲ.
ಕೃಪೆ : http://www.udayavani.com
|
|
|